ಕುಶಾಲನಗರ, ಸೆ.28: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಕುಶಾಲನಗರ ತಾಲ್ಲೂಕು
ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಶನಿವಾರ ಕುಶಾಲನಗರ ಪಟ್ಟಣದ ಕಲಾಭವನದಲ್ಲಿ ಪೊಲೀಸರಿಗೆ ಏರ್ಪಡಿಸಿದ್ದ ಗೀತ ಗಾಯನ ಸ್ಪರ್ಧಾ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.
ಗೀತ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ
ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಾನಪದ, ಭಾವಗೀತೆಗಳ ಗಾಯನದೊಂದಿಗೆ 1980 ನೇ ಇಸವಿಗಿಂತ ಹಿಂದಿನ ಹಳೆಯ ಚಿತ್ರಗೀತೆಗಳನ್ನು ಹಾಡುವ ಮೂಲಕ ಕನ್ನಡದ ಇತಿಹಾಸ, ನಾಡು- ನುಡಿ, ಪರಂಪರೆ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗಳನ್ನು ಅನಾವರಣಗೊಳಿಸಿದರು.
ಗಾಯನ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್ ಮಾತನಾಡಿ, ಇಂತಹ ಗಾಯನ ಸ್ಪರ್ಧೆಗಳು ಕನ್ನಡ ನಾಡು- ನುಡಿ, ಕಲೆ, ಸಂಸ್ಕೃತಿ – ಪರಂಪರೆಯನ್ನು ಪ್ರತಿಬಿಂಬಿಸಲು ಸಹಕಾರಿಯಾಗಿವೆ. ಸದಾ ಕೆಲಸದ ಒತ್ತಡ ಮತ್ತು ಜಂಜಾಟದಿಂದ ಕಾರ್ಯನಿರ್ವಹಿಸುವ ಪೊಲೀಸರು
ಇಂತಹ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಪರಸ್ಪರ ಬೆರೆಯುವ ಮೂಲಕ ಎಲ್ಲರ
ಮನಸ್ಸಿಗೆ ಮುದ ನೀಡುತ್ತಿದೆ ಎಂದರು.
ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಪೊಲೀಸರಿಗೆ ಹಮ್ಮಿಕೊಂಡಿರುವ ಗೀತ ಗಾಯನ ಕಾರ್ಯಕ್ರಮ ಶ್ಲಾಘನೀಯವಾದುದು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಜಿಲ್ಲೆಯಲ್ಲಿ ಪೊಲೀಸರಿಗೆ ಇದೇ ಮೊದಲ ಬಾರಿಗೆ ಇಂತಹ ಗಾಯನ ಸ್ಪರ್ಧೆಯನ್ನು ಸಂಘಟಿಸಿರುವುದರಿಂದ ಎಲ್ಲರೂ ಕುಟುಂಬ ಸಮೇತ ಒಂದು ದಿನ ಖುಷಿಯಿಂದ ಗೀತೆಗಳನ್ನು ಹಾಡುವ ಮೂಲಕ ಸಂತೋಷಪಡುತ್ತಿರುವುದು ಶ್ಲಾಘನೀಯವಾದುದು.ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ
ಇಂತಹ ಗಾಯನ ಸ್ಪರ್ಧೆಗಳನ್ನು ಸಂಘಟಿಸುವ ಮೂಲಕ ಗಾಯಕ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ನಾಡು- ನುಡಿ, ಭಾಷೆ, ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಬೆಳವಣಿಗೆಗೆ ಶ್ರಮಿಸುತ್ತಿದೆ. ಪೊಲೀಸರು ಸೇರಿದಂತೆ ಎಲ್ಲರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಪರಿಷತ್ತಿನ ಚಟುವಟಿಕೆಗಳಿಗೆ ಸಹಕರಿಸಬೇಕು ಎಂದು ಕೇಶವಕಾಮತ್ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಇಂತಹ ಸ್ಪರ್ಧೆಗಳು ಪೊಲೀಸರಲ್ಲಿ ಪರಸ್ಪರ ಪ್ರೀತಿ- ವಿಶ್ವಾಸ ಬೆಳೆಸುವುದರೊಂದಿಗೆ ಅವರಲ್ಲಿ ಕನ್ನಡ ನಾಡು- ನುಡಿ, ಸಂಸ್ಕೃತಿ ಬೆಳೆಸಲು ಸಹಕಾರಿಯಾಗಿವೆ. ಈ ಕಾರ್ಯಕ್ರಮ ಸಂಘಟನೆಗೆ ಪೊಲೀಸ್ ಇಲಾಖೆಯು ಹೆಚ್ಚಿನ ಸಹಕಾರ ನೀಡಿದ್ದು, ಕಸಾಪ ವತಿಯಿಂದ ಇದೇ ಮಾದರಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಜಿಲ್ಲಾ ಕ.ಸಾ.ಪ.ಸಮಿತಿಯ ನಿರ್ದೇಶಕ ಮೆ.ನಾ.ವೆಂಕಟನಾಯಕ್, 1915 ರಲ್ಲಿ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು- ನುಡಿ, ಕಲೆ,ಸಂಸ್ಕೃತಿ, ಪರಂಪರೆಯನ್ನು ಎತ್ತಿಹಿಡಿಯುತ್ತಾ
ಜನಸಾಮಾನ್ಯರ ಬಳಿಗೆ
ಸಾಹಿತ್ಯವನ್ನು ಕೊಂಡೊಯ್ಯುವ ಕೆಲಸವನ್ನು ಅವಿರತವಾಗಿ ನಿರ್ವಹಿಸುತ್ತಾ ಬರುತ್ತಿದೆ ಎಂದರು.
ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಗಂಗಾಧರಪ್ಪ,
ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು,
ಶಾರದ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಶಾಂತ ಶ್ರೀಪತಿ,
ಹೆಬ್ಬಾಲೆಯ ಶುಂಠಿ ವ್ಯಾಪಾರಿ ಎಚ್.ಎನ್.ರಾಜಶೇಖರ್,
ಮಹಿಳಾ ಸಂಘಟಕಿ ಅಶ್ವಿನಿ
ರೈ, ಹಿರಿಯ ಸಾಹಿತಿ ಫ್ಯಾನ್ಸಿ ಮುತ್ತಣ್ಣ, ಜಿಲ್ಲಾ ಕ.ಸಾ.ಪ. ಸಮಿತಿಯ ಸದಸ್ಯ ಮೆ.ನಾ.ವೆಂಕಟನಾಯಕ್, ಕೆ.ಎನ್.ದೇವರಾಜ್,
ಕುಶಾಲನಗರ ತಾಲ್ಲೂಕು ಕ.ಸಾ.ಪ.ದ ಗೌರವ ಕಾರ್ಯದರ್ಶಿಗಳಾದ ಎಸ್.ನಾಗರಾಜ್, ಟಿ.ವಿ.ಶೈಲಾ, ಗೌರವ ಕೋಶಾಧಿಕಾರಿ ಕೆ.ವಿ.ಉಮೇಶ್, ಪೊಲೀಸ್ ಇಲಾಖೆಯ
ಸಿಪಿಐಗಳಾದ ಸಂತೋಷ್, ರಾಜೇಶ್ ಕೋಟ್ಯಾನ್, ಪ್ರೀತಂ ಶ್ರೇಯಕರ್, ಜಿಲ್ಲಾ ವೈರ್ ಲೆಸ್ ವಿಭಾಗದ ಪಿಎಸ್ ಐ ಕೆ.ಎಸ್.ಧನಂಜಯ,
ಪಿಎಸ್ ಐ ಗಳಾದ ಚಂದ್ರಶೇಖರ್, ಮೋಹನ್ ರಾಜ್, ಗೀತಾ, ಭಾರತಿ, ಗಣೇಶ್, ರವಿ, ಚಂದ್ರು ಇತರರು ಇದ್ದರು.
ಕ.ಸಾ.ಪ. ಪದಾಧಿಕಾರಿಗಳು, ಸದಸ್ಯರು, ಸಂಗೀತ ಆಸಕ್ತರು, ನಾಗರಿಕರು ಇದ್ದರು.
ಕಸಾಪ ನಿರ್ದೇಶಕಿ ಬಿ.ಬಿ.ಹೇಮಲತಾ ಕಾರ್ಯಕ್ರಮ ನಿರ್ವಹಿಸಿದರು.
ಎಸ್.ನಾಗರಾಜ್ ಸ್ವಾಗತಿಸಿದರು. ಟಿ.ವಿ.ಶೈಲಾ
ವಂದಿಸಿದರು.
ಆರಂಭದಲ್ಲಿ ಗಾಯಕ ಬಿ.ಎಸ್.ಪರಮೇಶ್ ಗೀತೆ ಹಾಡಿದರು.
ತೀರ್ಪುಗಾರರಾಗಿ ವಾಣಿ ಉಮೇಶ್, ಪ್ರಿಯದರ್ಶಿನಿ, ಧನಲಕ್ಷ್ಮಿ ಭಾಗವಹಿಸಿದ್ದರು.
Back to top button
error: Content is protected !!